ಆರ್ಥಿಕ ಸಮಾನತೆ, ಸ್ತ್ರೀ ಸಮಾನತೆ, ಸಂಪತ್ತಿನ ವಿಕೇಂದ್ರೀಕರಣ, ಶ್ರಮ ವಿಭಜನೆ ಇನ್ನೂ ಮುಂತಾದ ಪರಿಕಲ್ಪನೆಗಳನ್ನು ೧೨ ನೆಯ ಶತಮಾನದಲ್ಲೇ ಆಚರಣೆಗೆ ತಂದವರು ಬಸವಣ್ಣನವರು.
ಲಿಂಗ ತಾರತಮ್ಯ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಮೂಡನಂಬಿಕೆ, ಬಹುದೇವತಾರಾಧನೆ ಮೊದಲಾದ ಅರ್ಥವಿಲ್ಲದ ಕಂದಾಚಾರಗಳನ್ನು ಕಟುವಾಗಿ ತಮ್ಮ ವಚನಗಳ ಮೂಲಕ ಟೀಕಿಸಿದವರು ಬಸವಣ್ಣನವರು.
ಆಧುನಿಕ ಭಾರತದ ಸಂವಿಧಾನ ಹೊಂದಿರುವ ಆಶಯಗಳನ್ನೇ ಬಸವಣ್ಣನವರ ವಚನಗಳೂ ಹೊಂದಿರುವುದರಿಂದ, ಅವರ ವಚನಗಳ ಗುಛ್ಛವೇ ಪ್ರಾಚೀನ ಭಾರತದ ಸಂವಿಧಾನವೆಂದೂ, ಬಸವಣ್ಣನವರೇ ಪ್ರಾಚೀನ ಭಾರತದ ಸಂವಿಧಾನದ ಶಿಲ್ಪಿಯೆಂದು ಕರೆಯುವುದು ಸೂಕ್ತವೆನಿಸುತ್ತದೆ.
‘ಕೂಡಲ ಸಂಗಮದೇವ’ ಎಂಬುದು ಬಸವಣ್ಣನವರ ವಚನಗಳ ಅಂಕಿತ. ಇವರ ವಚನಗಳನ್ನು ‘ಆಧ್ಯಾತ್ಮಿಕ ಅನುಭವ’ಗಳನ್ನು ಕುರಿತಾದ ವಚನಗಳು ಮತ್ತು ‘ಸಮಾಜ ಸುಧಾರಣಾಮುಖಿ’ಯಾದ ವಚನಗಳು ಎಂದು ಪ್ರಧಾನವಾಗಿ ಎರೆಡು ವರ್ಗಗಳಾಗಿ ವಿಂಗಡಿಸಿ ನೋಡಬಹುದು.
ಬಸವಣ್ಣನವರು ಕಾಯಕಕ್ಕೆ ಹೊಸ ಅರ್ಥವನ್ನು ನೀಡಿದ್ದಾರೆ. ನಿಷ್ಠೆಯಿಂದ ಮಾಡಿದ ಕಾಯಕ ಭಗವಂತನ ಆರಾಧನೆಗೆ ಸಮಾನ. ಕಾಯಕದಿಂದ ಹಣ ಸಂಪಾದಿಸಿ ಅದರಲ್ಲಿ ನಮ್ಮ ಅವಶ್ಯಕತೆಗೆ ಬೇಕಾದಷ್ಟನ್ನು ಮಾತ್ರ ಉಳಿಸಿಕೊಂಡು ಮಿಕ್ಕಿದ್ದನ್ನು ದಾಸೋಹಕ್ಕೆ ಸದ್ವಿನಿಯೋಗ ಮಾಡಬೇಕೆಂಬುದು ಅವರ ವಿನೂತನ ಪ್ರಯೋಗ. ಇಲ್ಲಿ ತಮಗೆ ಬೇಕಾದಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಹಂಚುವುದರಿಂದ ಹಸಿವು, ಬಡತನಗಳ ನಿರ್ಮೂಲನೆ, ಸಂಪತ್ತು ಸಮಾನವಾಗಿ ಹಂಚಿಕೆಯಾಗಿ ಸಂಪತ್ತಿನ ಕೇಂದ್ರೀಕರಣ ತಪ್ಪಿ, ಆರ್ಥಿಕ ಸಮಾನತೆಯನ್ನು ಸಾಧಿಸಬಹುದು ಎಂದು ಸಾಧಿಸಿ ತೋರಿಸಿದ ಮಹಾನ್ ಆರ್ಥಿಕ ತಜ್ಞ ಬಸವಣ್ಣನವರು.
ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ಇನ್ನೂ ಮುಂತಾದ ಶರಣರು ಬಸವಣ್ಣನವರ ಕಾಯಕ ತತ್ವದ ಆದರ್ಶವನ್ನು ಪಾಲಿಸಿ, ಶ್ರಮ ವಿಭಜನೆಯ ಮಹತ್ವ ಮತ್ತು ಲಾಭಗಳನ್ನು ಸಮಾಜಕ್ಕೆ ತೋರಿಸಿಕೊಡುವುದರ ಮೂಲಕ ಬಸವಣ್ಣನವರು ಇಲ್ಲಿ ಸಾಮಾಜಿಕ ತಜ್ಞನಾಗಿಯೂ ಕಾಣಿಸಿದ್ದಾರೆ.
ನಮ್ಮ ನಡವಳಿಕೆ ಮತ್ತು ಮಾತು ಹೇಗಿರಬೇಕೆಂದರೆ ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂದು ಹೇಳುವ ಮೂಲಕ ಸಾಂಸ್ಕೃತಿಕ ತಜ್ಞನಾಗಿಯೂ ಹೊರಹೊಮ್ಮಿದ್ದಾರೆ.
ಅನ್ಯರ ಲೋಪಗಳನ್ನು ಎತ್ತಿ ತೋರಿಸುವ ಮುನ್ನ ತಮ್ಮ ಲೋಪಗಳನ್ನು ಅರಿತುಕೊಳ್ಳುವುದು ಒಳಿತು ಎನ್ನುವುದು ಬಸವಣ್ಣನವರ ಅಭಿಪ್ರಾಯ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ‘ ಎಂದು ಸೂಕ್ಷ್ಮವಾಗಿಯೇ ಸಮಾಜದ ಕಿವಿ ಹಿಂಡಿದ್ದಾರೆ. ಅಲ್ಲದೆ ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸದಡೇನು ಹುರುಳಿಲ್ಲ‘, ‘ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ’ ತಾನು ಎಂದು ತಮ್ಮ ಮಿತಿಯನ್ನು ಮುಚ್ಚುಮರೆಯಿಲ್ಲದೆ ಪ್ರಕಟಪಡಿಸಿದ್ದಾರೆ.
ಬಸವಣ್ಣನವರ ಸಮಾಜಮುಖಿ ವಚನಗಳು ಲೋಕದ ಡಾಂಭಿಕತನ, ಸಾಮಾಜಿಕ ಅಸಮಾನತೆ, ಲಿಂಗತಾರತಮ್ಯ ಮೊದಲಾದವುಗಳನ್ನು ತೀವ್ರವಾಗಿ ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತದೆ. ಭಕ್ತಿಯ ಹೆಸರಿನಲ್ಲಿ ವಂಚಿಸುವ ವೇಷಧಾರಿಗಳು ಬಸವಣ್ಣನವರ ಖಂಡನೆಗೆ ಒಳಗಾಗಿದ್ದಾರೆ. ‘ಏತ ತಲೆವಾಗಿದಡೇನು ಗುರುಭಕ್ತನಾಗಬಲ್ಲುದೆ, ಇಕ್ಕುಳ ಕೈಮುಗಿದರೆ ಭೃತ್ಯಾಚಾರಿಯಾಗಬಲ್ಲುದೆ?, ಕಾಗೆ ಏಸು ಕಾಲ ನೀರ ತಡಿಯಲ್ಲಿದ್ದದೇನು ಹಂಸನಾಗಬಲ್ಲುದೆ? ಎಂದೆಲ್ಲಾ ಪ್ರಶ್ನಿಸುತ್ತಾರೆ.
ಬಸವಣ್ಣನವರು ಪ್ರಖರವಾದ ವೈಚಾರಿಕತೆಯಿಂದ ವರ್ಗಭೇದದ ವಿರುದ್ದ ಕತ್ತಿಯನ್ನು ಝಳಪಿಸಿದ್ದಾರೆ. ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲ ಒಂದೇ’ ಎಂಬುದು ಅವರ ವಾದ. ಸಹಭೋಜನ, ಅಂತರ್ಜಾತೀಯ ವಿವಾಹಗಳನ್ನು ಬಸವಣ್ಣನವರು ಪ್ರೇರೇಪಿಸುತ್ತಾರೆ. ಬಸವಣ್ಣನವರ ದೃಷ್ಟಿಯಲ್ಲಿ ಸಕಲ ಜೀವಾತ್ಮರಿಗೆಲ್ಲ ಲೇಸ ಬಯಸುವವನೇ ಕುಲಜ. ‘ಕೊಲುವವನೇ ಮಾದಿಗ ಹೊಲಸು ತಿನ್ನುವವನೇ ಹೊಲೆಯ’, ಅಸ್ಪೃಶ್ಯತಾ ಭಾವನೆ ಸಲ್ಲದು. ಹುಟ್ಟಿನಿಂದ ಬರುವುದು ಜಾತಿಯಲ್ಲ, ನೀತಿಯಿಂದ ಬರುವುದೇ ಜಾತಿ ಎಂಬುದು ಬಸವಣ್ಣನವರ ಅಭಿಪ್ರಾಯ.
ಬಸವಣ್ಣನವರು ಕೇವಲ ನುಡಿದವರಲ್ಲ, ‘ನುಡಿದಂತೆ ನಡೆದವರು’. ಬ್ರಾಹ್ಮಣರಾಗಿ ಹುಟ್ಟಿದ ಅವರು ಬ್ರಾಹ್ಮಣ ಧರ್ಮದಲ್ಲಿ ರೂಢಿಯಲ್ಲಿದ್ದ ಕೆಲವು ಸಾಂಪ್ರದಾಯಗಳು ಅವೈಚಾರಿಕವೆಂದು, ಜನಿವಾರವನ್ನು ಕಿತ್ತೆಸೆದು ಬ್ರಾಹ್ಮಣ ಸಮಾಜದಿಂದಲೇ ಹೊರ ಬಂದು ನುಡಿದಂತೆ ನಡೆದು ವಿಶ್ವಗುರುವಾದರು. ‘ಆಧ್ಯಾತ್ಮ ಸಾಧನೆ’ಯ ಜೊತೆಗೆ ‘ಸಮಾಜ ಸುಧಾರಣೆ’ ಅವರ ಮುಖ್ಯ ಪ್ರಣಾಳಿಕೆಗಳಾಗಿದ್ದವು. ಅಸ್ಪೃಶ್ಯನಾಗಿದ್ದ ಹರಳಯ್ಯನ ಮಗನಿಗೂ ಬ್ರಾಹ್ಮಣ ಮಧುವರಸನ ಮಗಳಿಗೂ ಕಲ್ಯಾಣವನ್ನು ಮಾಡಿಸಿ ಕಲ್ಯಾಣದ ತುಂಬೆಲ್ಲಾ ಕ್ರಾಂತಿಯ ಕಹಳೆಯನ್ನು ಮೊಳಗಿಸಿದರು. ಕೊನೆಗೆ ಕೊಡಲಸಂಗನಲ್ಲಿ ಐಕ್ಯರಾದರು.
ವೈಯುಕ್ತಿಕ ಕಲ್ಯಾಣ ಮತ್ತು ಸಾಮಾಜಿಕ ಕಲ್ಯಾಣಗಳು ಮಾನವ ರೂಪಿಸಿಕೊಂಡಿರುವ ಎಲ್ಲಾ ಸಂಘಟನೆಗಳ ಏಕಮಾತ್ರ ಧ್ಯೇಯ ಎನ್ನುವುದು ಬಸವಣ್ಣನವರ ಅಭಿಪ್ರಾಯ. ಸಮಾಜದ ಏಳಿಗೆ ಮತ್ತು ಸುಭದ್ರತೆಗೆ ತೊಡಕಾಗಿರುವ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ತಾರತಮ್ಯ, ವೃತ್ತಿ ತಾರತಮ್ಯ, ಲಿಂಗ ಭೇದ ಇವುಗಳನ್ನು ತೊಡೆದುಹಾಕದೆ ಸಮಾಜದ ಸರ್ವಾಂಗೀಣ ಪ್ರಗತಿ ಅಸಾಧ್ಯ.
ಕಸುಬುಗಳ ಆಧಾರದ ಮೇಲೆ ಜಾತಿ ವಿಂಗಡಣೆ ಸಮಾಜದಲ್ಲಿ ನಿರ್ಧಾರವಾಗಿದೆ. ಈ ಕಸುಬುಗಳ ಆಧಾರದಿಂದ ನಿರ್ಮಿತವಾದ ಜಾತಿಗಳ ವರ್ಗೀಕರಣದಿಂದ ಮೇಲು ಕೀಳೆಂಬ ಭಾವನೆ ಬೇರೂರಿದೆ. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕೆ ಸಾಲಿಗನಾದ, ವೇದವೋದಿ ಹಾರುವನಾದ’ ಎಂದು ಬಸವಣ್ಣನವರೇ ವಿವರಿಸಿದ್ದಾರೆ. ಪರಾವಲಂಬಿಯಾಗಿ ನಡೆಸುವ ಸುಖ ಜೀವನ ಮೇಲ್ಮೈಯ ಸಂಕೇತವಾಗಿಯೂ ಶ್ರಮ ಜೀವನ ಕೀಳ್ಮೆಯ ಸಂಕೇತವಾಗಿಯೂ ಬೆಳೆದು ಬಂದ ಕಾರಣ ದುಡಿಮೆಗೆ ಬೆಲೆ ಇಲ್ಲವಾಯಿತು. ಸಾಮಾಜಿಕ ಬದುಕಿನಲ್ಲಿ ಅನೈತಿಕತೆ ತಾಂಡವಾಡತೊಡಗಿತು. ಹಾಗಾಗಿ ದುಡಿಮೆಯ ಹಿರಿಮೆಯನ್ನು ಶ್ರಮದ ಮಹತ್ವವನ್ನು ಸಮಾಜದಲ್ಲಿ ಬೇರೂರುವಂತೆ ಮಾಡುವ ಮೂಲಕ ಸಮಾಜ ಸುಧಾರಣೆ ಸಾಧ್ಯ ಎಂದು ಬಸವಣ್ಣನವರು ಭಾವಿಸಿದ್ದರು. ಕಾಯಕ ನಿರತ ಭಕ್ತರೆಲ್ಲರೂ ಸಮಾನರು, ಲಿಂಗಧಾರಿಯಲ್ಲದ ದೊರೆ ಲಿಂಗಧಾರಿಯಾದ ಜಲಗಾರನಿಗಿಂತಲೂ ಕೀಳೆಂದು ಸ್ಪಷ್ಟಪಡಿಸಿದರು.
ಅಸ್ಪೃಶ್ಯತೆ ಅನೈತಿಕತೆಯ ಸಂಕೇತ; ಅದೇ ಸಮಾಜದ ಅವನತಿಯ ಚಿಹ್ನೆ. ಈ ಅಸ್ಪೃಶ್ಯತೆಯ ನಿರ್ಮೂಲನೆಗಾಗಿ ತಮ್ಮ ಬದುಕನ್ನೇ ಗಂಧದಂತೆ ತೇದವರು ಬಸವಣ್ಣ. ಅಂತ್ಯಜರಿಗೂ ಅವರು ಲಿಂಗವನ್ನಿಟ್ಟು ಸಮಾಜದಲ್ಲಿ ಅವರು ಮೇಲ್ವರ್ಗದವರೊಡನೆ ಸರಿಸಮಾನವಾಗಿ ನಿಲ್ಲಲು ಶ್ರಮಿಸಿದರು ‘ಮಾದರ ಚೆನ್ನಯ್ಯನ ಮನೆಯ ಮಗ ನಾನು’ ಎಂದ ಬಸವಣ್ಣನವರು ಮುಂದುವರೆದು ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ ಕುಲವುಂಟೆ ಜಂಗಮವಿದ್ದಡೆಯಲ್ಲಿ’ ಎಂದು ಬರೀ ಮಾತಿನಲ್ಲಿ ಗಗನಕ್ಕೆ ಏಣಿ ಹಾಕಿದವರಲ್ಲ. ನುಡಿದಂತೆ ನಡೆದು ಕ್ರಿಯಾಶೀಲರಾಗಿ ಆ ತತ್ವಗಳನ್ನ ಆಚರಣೆಗೆ ತಂದವರು ಬಸವಣ್ಣ.
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಭಾರನ್ನೆತ್ತುವೆ, ಆಗಮದ ಮೂಗ ಕೊಯ್ಯಿವೆ
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ.
ಎನ್ನುವ ಮೂಲಕ ಬಸವಣ್ಣನವರು ಅಸಮಾನತೆ ಅಸ್ಪೃಶ್ಯತೆ ಮತ್ತು ಶೋಷಣೆಗಳನ್ನು ಪೋಷಿಸುವ ಸಕಲ ಪವಿತ್ರ ಗ್ರಂಥಗಳನ್ನು ವಿಧಿ ನಿಷೇಧ ಆಚಾರಗಳನ್ನು ಶಾಸ್ತ್ರಗಳನ್ನು ತಿರಸ್ಕರಿಸುತ್ತಾರೆ. ‘ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ’ ಎನ್ನುತ್ತಾ ಎಲ್ಲಾ ಅಸಮಾನತೆಗಳನ್ನು ಪೋಷಿಸುತ್ತಾ ಬಂದಿರುವ ಒಂದು ಸಂಘಟನೆಯಾದ ದೇವಾಲಯವನ್ನು ಆಗಿನ ಕಾಲದ ಶರಣರು ತಿರಸ್ಕರಿಸಬೇಕೆಂದು ಬಸವಣ್ಣನವರು ಕರೆ ನೀಡಿದರು.
ದಯೆ, ಮಾನವೀಯತೆ ಮರೆಯಾಗಿರುವ ಇಂದಿನ ಕಾಲದ ಧರ್ಮಕ್ಕೆ ಬಸವಣ್ಣನವರು 12ನೆಯ ಶತಮಾನದಲ್ಲೇ ಹೊಸ ವ್ಯಾಖ್ಯೆಯನ್ನು ಬರೆದರು. ಧರ್ಮವೆನ್ನುವುದು ರಹಸ್ಯಗಳಿಂದ ಕೂಡಿದ ಕಗ್ಗಂಟಲ್ಲ ಎಂದು ಹೇಳುತ್ತಾ ಅದನ್ನು ಸರಳಗೊಳಿಸಿದರು ‘ದಯವಿಲ್ಲದ ಧರ್ಮವದೇದಯ್ಯ, ದಯವೇ ಧರ್ಮದ ಮೂಲವಯ್ಯ’ ಎಂದು ದೇವನೊಲಿಯಲು ಬೇಕಾದ ನಿಜವಾದ ಧರ್ಮದ ಮೂಲ ದಯೆ ಮಾತ್ರ ಎಂದು ಲೋಕಕ್ಕೆ ಸಾರಿದರು.
ಇಂದು ನಾವು ಬಸವಣ್ಣನವರ ಜಯಂತಿಯನ್ನು ಆಚರಿಸುತ್ತಿದ್ದೇವೆಯಾದರೂ ಅವರ ಆದರ್ಶಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದೇವೆ. ಪ್ರತಿಯೊಬ್ಬರೂ ಕಾಯಕವನ್ನು ಮಾಡಲೇಬೇಕೆಂಬ ಆಚರಣೆಯನ್ನು ತಂದ ಬಸವಣ್ಣನವರ ಜಯಂತಿಯನ್ನು ಸಾರ್ವತ್ರಿಕ ರಜೆಯನ್ನು ಘೋಷಿಸುವುದರ ಮೂಲಕ ಆಚರಿಸುವುದು ವಿಷಾದನೀಯ.
ಇಂದಿನ ನಮ್ಮ ಸಂವಿಧಾನಕ್ಕೆ ಅಂದೇ ಕಲ್ಯಾಣದ ಅನುಭವ ಮಂಟಪವೆಂಬ ಪಾರ್ಲಿಮೆಂಟ್ನಲ್ಲಿ ಅಲ್ಲಮಪ್ರಭುವಿನ ಅಧ್ಯಕ್ಷತೆಯಲ್ಲಿ ಭದ್ರಬುನಾದಿಯನ್ನು ಹಾಕಿದ ಬಸವಣ್ಣನವರ ಜಯಂತಿಯನ್ನು ಕೇವಲ ಆಚರಣೆಯಾಗಿ ಮಾಡದೆ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ನಮ್ಮ ಭವ್ಯ ಭಾರತವನ್ನು ಕಲ್ಯಾಣವಾಗಿ ಮಾಡಲು ಎಲ್ಲರೂ ಒಂದಾಗಬೇಕಿದೆ.

– ಶಮಂತಕುಮಾರ್ ಎಸ್

