ಹೊನ್ನಮ್ಮನ ‘ಕಂಬ’ದ ಕಥೆ !
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನಲ್ಲಿರುವ ನನ್ನೂರು ದಂಡಿನಶಿವರದ ಗ್ರಾಮದೇವತೆ ಹೊನ್ನಮ್ಮನ ಜಾತ್ರೆಯ ಅಂಗವಾಗಿ ‘ಕಂಬ’ ಹಾಕುವ ವಿಶೇಷ ಆಚರಣೆ ರೂಡಿಯಲ್ಲಿದ್ದು ,ಹಲವು ದಶಕಗಳಿಂದ ನೆಡೆದು ಬರುತ್ತಿರುವ ಸಂಪ್ರದಾಯವಾಗಿದೆ.
ನನ್ನೂರಿನ ಸಮೀಪದಲ್ಲಿರುವ ಅಮ್ಮಸಂದ್ರದಿAದ ಹತ್ತಿ ಮರದ ಕೊಂಬೆಯೊAದನ್ನು ಉತ್ಸವದ ಮೂಲಕ ದಂಡಿನಶಿವರಕ್ಕೆ ತಂದು ಅದನ್ನು ಪೂಜಿಸಿ, ಮಂಟಪದಲ್ಲಿ ಪ್ರತಿಷಾಪಿಸುವುದನ್ನು ಇಲ್ಲಿನ ಜನರು ‘ಕಂಬ’ ಎಂದು ಕರೆಯುತ್ತಾರೆ. ಕಂಬ ಹಾಕಿದ
ದಿನದಿಂದ ಕಂಬ ಕೀಳುವವರೆಗೂ ಈ ಗ್ರಾಮ ಮತ್ತು ಇದಕ್ಕೆ ಸೇರಿದ ಮೂವತ್ತಮೂರು ಹಳ್ಳಿಗಳ ಜನರು ಯಾರೂ ಸಹ ಮಾಂಸಾಹಾರ ಸೇವಿಸುವುದಿಲ್ಲ. ಮೀನು, ಮೊಟ್ಟೆ, ಮಾಂಸ, ಕೋಳಿಗಳನ್ನು ಮಾರುವಂತಿಲ್ಲ ಮತ್ತು ತಿನ್ನುವಂತಿಲ್ಲ ಎಂಬ ಸಂಪ್ರದಾಯ ಇಲ್ಲಿ ನಡೆದುಕೊಂಡು ಬರುತ್ತಿದೆ. ಇದಲ್ಲದೆ ಇಲ್ಲಿನ ಜನರು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ ಮತ್ತು ಪ್ರವಾಸ ಕೈಗೊಳ್ಳುವುದಿಲ್ಲ.
ಇದು ಹೊನ್ನಮ್ಮನ ಅಪ್ಪಣೆ ಎಂದು ತಿಳಿದಿರುವ ಭಕ್ತರು, ಅದನ್ನು ಭಯ ಭಕ್ತಿಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳು ವಿವಾಹವಾಗಿ ಗಂಡನ ಮನೆಯಲ್ಲಿದ್ದರೂ ಸಹ ದೇವಿಯ ಅಪ್ಪಣೆಯನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಈ ಗ್ರಾಮಗಳ ಕೆಲವರು ವಿದೇಶಗಳಲ್ಲಿ ನೆಲೆಸಿದ್ದರೂ ಸಹ ದೇವಿಯ ಈ ನಿಯಮಗಳನ್ನು ಬಿಟ್ಟಿಲ್ಲ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಹೊನ್ನಮ್ಮನ ಜಾತ್ರೆಗೆ ಹದಿನೈದು ದಿನ ಮುಂಚೆ ಈ ಗ್ರಾಮದ ಸಮೀಪದ ಅಮ್ಮಸಂದ್ರದಿAದ ಮೂರೂ ಕವಲೊಡೆದ ಮರದ ಕೊಂಬೆಯನ್ನು ಕಡಿದು ತರಲಾಗುತ್ತದೆ. ಅದಕ್ಕೆ ಬಿಳಿ ಬಟ್ಟೆ ಸುತ್ತಿ ಪೊಜಿಸಿ, ಗ್ರಾಮದ ‘ಕುರುಜಿ ಕಂಬ’ ಎಂಬ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದುವೇ ಜಾತ್ರೆಗೆ ಮುನ್ನುಡಿ.
ಕಂಬ ಹಾಕಿದ ೧೫ ದಿನಕ್ಕೆ ಇಲ್ಲಿ ಜಾತ್ರೆ ಆರಂಭವಾಗುತ್ತದೆ. ಕಂಬ ಹಾಕಿ, ಕೀಳುವ ಬಗ್ಗೆ ದಂತ ಕಥೆಯೊಂದು ತಳುಕು ಹಾಕಿಕೊಂಡಿದೆ. ಅದರ ಪ್ರಕಾರ ಹೊನ್ನಮ್ಮ ಮತ್ತು ಪತಿ ವಸಂತರಾಯನ ನಡುವೆ ಜಗಳ ನೆಡೆದು ಪತಿಯ ಶಾಪದ ಫಲವಾಗಿ ದೇವಿಗೆ ವರ್ಷಕ್ಕೆ ಒಂದು ಮಗು ಜನಿಸಿ,ಮರಣ ಹೊಂದುತ್ತದAತೆ. ಅದರ ಪ್ರತೀಕವಾಗಿ ಈ ಆಚರಣೆ ಇಲ್ಲಿ ಜಾರಿಯಲ್ಲಿದೆ.
ಕಂಬ ಹಾಕಿದಾಗ ಇಲ್ಲಿನ ಜನರು ಹೊನ್ನಮ್ಮನಿಗೆ ಮಗು ಜನಿಸಿತೆಂದೂ, ಕಂಬ ಕಿತ್ತಾಗ ಮಗು ಮರಣ ಹೊಂದಿತೆAದು ತಿಳಿಯುತ್ತಾರೆ. ಕಂಬ ಹಾಕಿದಾಗ ಹಲವು ಹಳ್ಳಿಗಳ ಜನರಿಗೆ ಪ್ರಸಾದವಾಗಿ ತಂಬಿಟ್ಟು, ಹೊಂಬಳೆಯನ್ನು ಅರ್ಚಕರು ಹಂಚುತ್ತಾರೆ. ಜಾತ್ರೆಯ ಕೊನೆಯ ದಿನ ಶನಿವಾರ ಸಂಜೆ ಹೊನ್ನಮ್ಮನ ಮತ್ತು ಆಂಜನೇಯಸ್ವಾಮಿಯ ಉತ್ಸವದೊಂದಿಗೆ ಕಂಬ ಕೀಳಲಾಗುತ್ತದೆ. ಅನಂತರ ಕಂಬದ ಮೆರವಣೆಗೆ ನೆಡೆಸಿ, ಬಾವಿಯೊಂದರಲ್ಲಿ ನೀರಿಗೆ ವಿಸರ್ಜಿಸಲಾಗುತ್ತದೆ. ಅಲ್ಲಿಗೆ ದೇವಿಯ ಜಾತ್ರೆಗೆ ಅಂತಿಮ ತೆರೆ ಬೀಳುತ್ತದೆ.
- ಇಲ್ಲಿ ಗಂಡಸರೂ ಗಡಿಗೆ ಹೊರುತ್ತಾರೆ…!
ರಾಜ್ಯದಲ್ಲಿ ಇತ್ತೀಚೆಗೆ ವಿವಾದ ಮೂಡಿಸಿದ್ದ ಮಡೆಸ್ನಾನದ ಆಚರಣೆ ಬಗ್ಗೆ ಇಲ್ಲರಿಗೂ ಗೊತ್ತು. ಆದರೆ ಮಡೆ ಉತ್ಸವದ ಬಗ್ಗೆ ತಿಳಿದವರು ವಿರಳ. ಇಂದಿನ ಆಧುನಿಕ ಕಾಲದಲ್ಲಿಯೂ ಸಹ ಗಂಡಸರು ಮಡೆ ಗಡಿಗೆಗಳನ್ನು ಹೊತ್ತು ದೇವಿಯ ಹರಕೆ ತೀರಿಸುವ ವಿಶೇಷ ಆಚರಣೆಯೊಂದು ನನ್ನೂರಲ್ಲಿ ಹಲವು ದಶಕಗಳಿಂದ ನೆಡೆಯುತ್ತಾ ಬಂದಿದೆ.
ಗ್ರಾಮ ದೇವತೆ ಹೊನ್ನಾದೇವಿಯ ಜಾತ್ರೆಯ ಮೊದಲ ದಿನ ರಾತ್ರಿ ಇಂತಹ ಮಡೆ ಉತ್ಸವ ನೋಡಬಹುದು. ಅಂದು ದೇವಿಗೆ ಅರ್ಪಿಸಲು ಮಡೆ ಅನ್ನವಿರುವ ಗಡಿಗೆಗಳನ್ನು ಭಕ್ತರು ತಮ್ಮ ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗುವುದನ್ನು ಸ್ಥಳೀಯರು ‘ಮಡೆ ಉತ್ಸವ’ ವೆಂದು ಕರೆಯುತ್ತಾರೆ. ಮಹಿಳೆಯರೊಂದಿಗೆ ಗಂಡಸರೂ ಸಹ ಮಡೆ ಗಡಿಗೆಗಳನ್ನು ಹೊರುವುದು ಇಲ್ಲಿನ ವಿಶೇಷ ಸಂಗತಿ.
“ಅರಸಿ ಹೊನ್ನಮ್ಮನಿಗೆ ಗೆರೆಸಿಲಿ ಹೂ ತಂದು
ವರುಷಕ್ಕೆ ಮುನ್ನೂರು ಮಡೆ ಹೊಂಟೂ
ರಾತ್ರೀಲಿ ನಡೆ ಮಡಿ ಹಾಸೋ ಮಡಿವಾಳ …..”
ಮಡೆ ಉತ್ಸವದ ಆಚರಣೆ ಬಗ್ಗೆ ಸ್ಥಳೀಯರು ಇಂತಹ ಜಾನಪದಗೀತೆಯೊಂದನ್ನು ಕಟ್ಟಿ ಹಾಡುತ್ತಾ ಬಂದಿದ್ದಾರೆ.
ಮುನ್ನೂರು ಹೊಸ ಗಡಿಗೆಗಳನ್ನು ಒಲೆಯ ಮೇಲೆ ಒಂದರ ಮೇಲೊಂದರAತೆ ವೈವಿಧ್ಯ ರೀತಿಯಲ್ಲಿ ಜೋಡಿಸಿ ದೇವಿಯ ಭೋಜನಕ್ಕೆ ಮಡೆ ಅನ್ನವನ್ನು ಬೇಯಿಸಲಾಗುತ್ತದೆ. ಈ ಗಡಿಗೆಗಳನ್ನು ಹರಕೆ ಹೊತ್ತ ಭಕ್ತರು ಮಡಿ ಬಟ್ಟೆಯ ಮೇಲೆ ನಡೆದು ಸಾಗುತ್ತಾರೆ. ಇದನ್ನು’ ನಡೆ ಮಡಿ’ ಎನ್ನಲಾಗುತ್ತದೆ.
ಮಡೆ ಗಡಿಗೆಗಳನ್ನು ಹೊರುವವರು ಕೆಲವು ಕಟ್ಟು ಪಾಡುಗಳನ್ನು ಅನುಸರಿಸಬೇಕು. ತಪ್ಪಿದರೆ ದೇವಿಯ ಅವಕೃಪೆಗೆ ಒಳಪಡುತ್ತಾರೆಂಬ ಭಯಭಕ್ತಿ ಇಲ್ಲಿದೆ.
ಭಕ್ತರು ದಿನವಿಡೀ ಉಪವಾಸವಿರಬೇಕು. ಗಂಡಸರು ಬಿಳಿ ಬಟ್ಟೆಗಳನ್ನು, ಹೆಂಗಸರು ರೇಷ್ಮೆ ಸೀರೆಗಳನ್ನು ಧರಿಸಿರಬೇಕು. ಇವರಿಗೆ ಯಾವುದೇ ಅಂಗವ್ಯೆಕಲ್ಯ ಇರಬಾರದು. ಹಲ್ಲು ಬಿದ್ದಿರಬಾರದು. ಸಾಮಾನ್ಯವಾಗಿ ಈ ಭಾಗದ ವಕ್ಕಲಿಗ ಜಾತಿಯ ನವ ವಧೂವರರು ಮಡೆ ಹೊರುವ ಸಂಪ್ರದಾಯವಿದೆ.
ಅರ್ಚಕರು ಹೊರುವ ಮಡೆ ಅನ್ನವನ್ನು ಸಿದ್ದರಬೆಟ್ಟದಿಂದ ತಂದ ಸೊಪ್ಪು ಮತ್ತು ಕುಂಬಳಕಾಯಿ ಬಳಸಿ ತಯಾರಿಸಲಾಗುತ್ತದೆ.
ರಾತ್ರಿ ಹನ್ನೆರೆಡು ಗಂಟೆಗೆ ಆರಂಭವಾಗುವ ಮಡೆ ಉತ್ಸವದಲ್ಲಿ ಗಡಿಗೆಗಳನ್ನು ಹೊತ್ತ ಭಕ್ತರು ದೇವಿಯ ಮೆರವಣಿಗೆಯ ಹಿಂದೆ ಸಾಲಾಗಿ ನಡೆದು ಹೋಗುವ ದೃಶ್ಯ ನೋಡಲು ಆಕರ್ಷಕವಾಗಿರುತ್ತದೆ. ಬೆಳಗಿನ ಜಾವದವರೆಗೆ ನೆಡೆಯುವ ಉತ್ಸವದಲ್ಲಿ ಹೊತ್ತು ತಂದ ಮಡೆ ಗಡಿಗೆಗಳನ್ನು ದೇವಾಲಯದ ಒಳಗಿಟ್ಟು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಜನರು ತೆರಳುತ್ತಾರೆ.
ಕೆಲವು ಗಂಟೆಗಳ ನಂತರ ಬರುವ ಅರ್ಚಕರು ದೇಗುಲದ ಬಾಗಿಲು ತೆರೆದು ಭಕ್ತರಿಗೆ ಮಡೆ ಗಡಿಗೆಗಳನ್ನು ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಭಕ್ತರು ದೇವಾಲಯದಲ್ಲಿ ಇಟ್ಟು ಬಂದ ಮಡೆ ಅನ್ನವನ್ನು ಹೊನ್ನಾದೇವಿ ತನ್ನ ಮೂವತ್ತಾ ಮೂರು ಸಹೋದರಿಯರೊಂದಿಗೆ ಭೋಜನ ಮಾಡುತ್ತಾಳೆಂಬುದು ಸ್ಥಳೀಯರ ನಂಬಿಕೆಯಾಗಿದೆ.
ಅದಕ್ಕಾಗಿ ಇಲ್ಲಿನ ಜನರು ಹೊಸ ಗಡಿಗೆಯೊಳಕ್ಕೆ ಯಾರೂ ಕೈಹಾಕಿ ತೊಳೆಯುವುದಿಲ್ಲ. ಬಹಳ ಭಯಭಕ್ತಿಯಿಂದ ಇಲ್ಲಿ ಮಡೆ ಅನ್ನ ತಯಾರಿಸುವ ಸಂಪ್ರದಾಯ ರೂಢಿಯಲ್ಲಿದೆಯಂತೆ. ಮತ್ತೊಂದು ಆಸಕ್ತಿಕರ ಸಂಗತಿಯೆAದರೆ ಇಲ್ಲಿ ಮಡೆ ಅನ್ನವನ್ನು ಒಂದರಮೆಲೊAದರAತೆ ಗÀಡಿಗೆಗಳನ್ನು ಒಲೆಯ ಮೇಲೆ ಇಟ್ಟು ಬೇಯಿಸಲಾಗುತ್ತದೆ.
ಹೊನ್ನಾದೇವಿಯ ಮಡೆ ಹೊರುವ ಭಕ್ತರ ಬೇಡಿಕೆಗಳನ್ನು ಈ ದೇವಿಯು ಖಂಡಿತಾ ಈಡೇರಿಸುತ್ತಾಳೆ ಎಂಬುದು ಇಲ್ಲಿ ಮಡೆ ಹೊರುವವರ ಅಭಿಪ್ರಾಯವಾಗಿದೆ. ಅದರಲ್ಲೂ ಹೊಸದಾಗಿ ಮದುವೆಯಾದ ಸತಿಪತಿಯರು ದೇವಿಯ ಮಡೆಗಡಿಗೆಗಳನ್ನು ಹೊರುವುದು ಇಲ್ಲಿನ ವಿಶೇಷ ಸಂಗತಿಯಾಗಿದೆ.
- ಕತ್ತಲಲ್ಲಿ ಸೋಮನ ಕುಣಿತ…!
ಹೊನ್ನಮ್ಮನ ಜಾತ್ರೆಯಲ್ಲಿ ನಡೆಯುವ ಸೋಮನ ಕುಣಿತ ಬಹಳ ವಿಶೇಷತೆಯಿಂದ ಕೂಡಿದೆ. ಇಲ್ಲಿರುವ ಸೋಮಗಳ ಮುಖವಾಡಗಳು ಬೇರೆಲ್ಲೂ ಕಂಡು ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಇವುಗಳನ್ನು ಮನುಷ್ಯರು ನಿರ್ಮಿಸಿಲ್ಲ. ದೇವರ ಕೃಪೆಯಿಂದ ಇಲ್ಲಿಗೆ ಬಂದು ಸೇರಿವೆಯಂತೆ. ಇಂತಹ ಸೋಮಗಳ ಮುಖವಾಡಗಳು ಇಲ್ಲಿಗೆ ಬಂದ ಹಲವು ದಂತಕಥೆಗಳನ್ನು ನನ್ನೂರಿನ ಜನರು ಹೇಳುತ್ತಾರೆ. ಆದರೆ ಅವುಗಳಿಗೆ ಯಾವುದೇ ಪುರಾವೆಗಳು ದೊರೆತಿಲ್ಲ.
ಹೊನ್ನಮ್ಮನ ಜಾತ್ರೆಯಲ್ಲಿ ವರ್ಷಕ್ಕೆರಡು ದಿನ ಮಾತ್ರ ಈ ಸೋಮಗಳ ಕುಣಿತವನ್ನು ನಾವು ನೋಡಬಹುದು. ರಾತ್ರಿಯಲ್ಲಿ ನಡೆಯುವ ಈ ಕುಣಿತ ಐದು ನಿಗಧಿತ ಸ್ಥಳಗಳಲ್ಲಿ ಮಾತ್ರ ನಡೆಯುತ್ತದೆ. ಎರಡು ಮುಖವಾಡಗಳನ್ನು ಒಬ್ಬರೇ ಒಂದಾದ ಮೇಲೊಂದರAತೆ ಧರಿಸಿಕೊಂಡು ಸೊಗಸಾಗಿ ನರ್ತಿಸುತ್ತಾರೆ. ಈ ಕುಣಿತಕ್ಕೆ ಇಂಪಾದ ವಾದ್ಯಗಳ ಹಿನ್ನಲೆಯಿರುತ್ತದೆ. ಈ ಸೋಮಗಳಿಗೆ ತಿಂಗಳ ಬೆಳಕು, ಕೋಳಿಕೂಗು ಮತ್ತು ರಾಗಿಕಲ್ಲಿನ ಸಪ್ಪಳ ನಿಷಿದ್ಧವೆಂಬ ನಂಬಿಕೆ ಇದೆ. ಜಾತ್ರೆಯ ಬುಧವಾರ ಮತ್ತು ಶನಿವಾರ ರಾತ್ರಿ ಈ ಸೋಮಗಳ ಕುಣಿತ ನೋಡಬಹುದು.
ಹೊನ್ನಾದೇವಿಯ ಜಾತ್ರೆಯಲ್ಲಿ ಒಂದು ಮಧ್ಯರಾತ್ರಿಯ ಕಗ್ಗತ್ತಲಲ್ಲಿ, ಮಂದ ಬೆಳಕಿನಲ್ಲಿ, ಗುಡಿಯೊಳಗಿಂದ ಕತ್ತಲೆ ಸೋಮಗಳು ಹೊರಬರುತ್ತವೆ. ಪೂಜಾರಿಯು ಕೆಂಪು, ಹಳದಿ ಬಣ್ಣದ ಎರಡು ಸೋಮಗಳನ್ನು ಒಂದಾದ ಮೇಲೊಂದರAತೆ ಮುಖಕ್ಕೆ ಧರಿಸಿ, ಎಡಗೆಯಲ್ಲಿ ಕರವಸ್ತ್ರ, ಬಲಗೈಯಲ್ಲಿ ಕಠಾರಿ ಹಿಡಿದು, ಕನಕ ತಮಟೆ ಮತ್ತು ಮೌರಿ ಮೇಳಕ್ಕೆ ಅನುಗುಣವಾಗಿ ರೋಧಿಸುವಂತೆ ಅಭಿನಯಿಸುತ್ತಾನೆ. ಆ ಸಮಯದಲ್ಲಿ ಕತ್ತಲಾಗಿದ್ದರೂ ಜನ ಜಾತ್ರೆಯಂತೆ ಸೇರಿರುತ್ತದೆ. ಅಳುವ ಸೋಮನ ಮುಂದೆ ಮಂತ್ರಮುಗ್ಧರಾಗಿರುತ್ತಾರೆ. ವಾದ್ಯಗಳ ಧ್ವನಿ ಮತ್ತು ಸೋಮನ ರೋಧನೆಗೆ ಅವರೂ ದುಃಖಿತರಾಗಿ ಬಿಡುತ್ತಾರೆ. ಈ ಅಭಿನಯ, ಕುಣಿತ ಐದು ಕಡೆ ಮಾತ್ರ ನಡೆಯುತ್ತದೆ. ಸೋಮಗಳು ಕತ್ತಲೆಯಲ್ಲೇ ನರ್ತಿಸಬೇಕು. ಚಂದ್ರನ ಬೆಳಕು ಕಾಣಕೂಡದು. ರಾಗಿ ಬೀಸುವ, ಕೋಳಿ ಕೂಗುವ ಸದ್ದು ಕೇಳಬಾರದು, ಚಂದ್ರನ ಬೆಳಕು ಕಂಡರೆ, ರಾಗಿ ಬೀಸುವ, ಕೋಳಿ ಕೂಗುವ ಸದ್ದು ಕೇಳಿದ ಕೂಡಲೇ ಅಭಿನಯವನ್ನು ನಿಲ್ಲಿಸಿ ಬಿಡಬೇಕು. ಇಲ್ಲವಾದರೆ ಸೋಮನನ್ನು ಧರಿಸಿದವನಿಗೆ ಕೇಡಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ಸೋಮಗಳ ರೋಧನವು ಹೊನ್ನಾದೇವಿ ತನ್ನ ಮಗುವನ್ನು ಕಳೆದುಕೊಂಡು ರೋಧಿಸುವುದರ ಸಂಕೇತವನ್ನುತ್ತಾರೆ ಸ್ಥಳೀಯರು.
- ನಗಾರಿ ವಾದ್ಯ
ಇಲ್ಲಿನ ಮತ್ತೊಂದು ಜಾನಪದ ಕಲೆ ಎಂದರೆ ‘ನಗಾರಿ ವಾದ್ಯ’, ದೇವರ ಉತ್ಸವಗಳ ಸಂದರ್ಭದಲ್ಲಿ ಬಸವನ (ಎತ್ತು) ಮೇಲೆ ಚರ್ಮದಿಂದ ತಯಾರಿಸಲ್ಪಟ್ಟ ನಗಾರಿಗಳನ್ನು ಹೇರಿ, ಬಸವನ ಮೇಲೆ ಕುಳಿತ ವ್ಯಕ್ತಿ, ವಾದ್ಯಕ್ಕೆ ತಕ್ಕಂತೆ ನಗಾರಿಗಳನ್ನು ಕೋಲಿನಿಂದ ಬಡಿಯುತ್ತಾನೆ. ಇದರ ಶಬ್ದ ಎದೆ ನಡುಗಿಸುವಂತಿದ್ದರೂ ಕುಣಿಯಬೇಕೆನಿಸುತ್ತದೆ.
ಇದು ಯಾಂತ್ರಿಕ ಯುಗ. ಪ್ರತಿಯೊಂದರಲ್ಲೂ ಕಲಬೆರಕೆ. ಸಂಗೀತ, ಆಹಾರ ಸಂಸ್ಕೃತಿ ಹೀಗೆ ಬಗೆ ಬಗೆಯ ವಿಷಯಗಳಲ್ಲೂ ‘ಮೂಲ’ವೇ ಕಣ್ಮರೆಯಾದಂಥ ಸನ್ನಿವೇಶದಲ್ಲಿ ನಾವಿದ್ದೇವೆ. ಡೊಳ್ಳು, ತಮಟೆ ಮುಂತಾದ ಜಾನಪದ ‘ಶಬ್ದ’ಗಳೆಲ್ಲ ಕೀಬೋರ್ಡ್ಗಳಲ್ಲಿ ಲಭ್ಯ ಆದರೆ ನನ್ನೂರು ಈ ಅಪವಾದಕ್ಕೆ ಹೊರತಾಗಿದೆ. ‘ಡಂ.ಢA ಠಕ್ ಠಕ್, ಶಬ್ದ ಕೇಳಿದೊಡನೆ ಯಾರಿಗೆ ತಾನೇ ರೋಮಾಂಚನ ಆಗುವುದಿಲ್ಲ? ಅದರಲ್ಲೂ ನಗಾರಿ ಶಬ್ದವಂತೂ ಕರ್ಣಾನಂದ… ಇಂಥ ನಗಾರಿ ಬಗ್ಗೆ ಜಾನಪದದಲ್ಲೂ ವಿಶೇಷ ವರ್ಣನೆ ಉಂಟು.
ಹೊನ್ನಮ್ಮ ಹೊರಟಾಳೆ ಬಸವನ ಬೆನ್ನೇರಿ!
ಹೊನ್ನಿನ ನಗಾರಿ ಹೊಡೆಸುತ್ತಾ!
ಎಂದು ಮೈ ತುಂಬಿ ಹಾಡುತ್ತಾರೆ ಜಾನಪದರು. ಇದು ನನ್ನೂರು ದಂಡಿನಶಿವರ ಪ್ರಾಂತ್ಯದಲ್ಲಿ ಪ್ರಚಲಿತವಾದ ಹಾಡು. ಗ್ರಾಮದೇವತೆ ಹೊನ್ನಮ್ಮನ ಜಾತ್ರೆ; ಇತರೆ ಉತ್ಸವಗಳಲ್ಲಿ ‘ನಗಾರಿ ವಾದ್ಯ’ದ್ದೇ ಕಾರುಬಾರು. ದೇವರಿಗೆ ಬಿಟ್ಟ ಹಸುಗಳಿಗೆ ವಿಶೇಷ ಅಲಂಕಾರ ಮಾಡಿ, ನಗಾರಿಯನ್ನೂ ಬಸವನ ಮೇಲೆ ಹಾಕುತ್ತಾರೆ. ಜತೆಗೆ ನಗಾರಿ ಬಾರಿಸುವವರೂ ಇದರ ಮೇಲೆ ಕುಳಿತುಕೊಳ್ಳುತ್ತಾರೆ. ಎರಡು ಕೋಲುಗಳಿಂದ ಶೃತಿವಾದ್ಯದ ತಾಳಕ್ಕೆ ತಕ್ಕಂತೆ ನಗಾರಿ ಬಾರಿಸುವ ಶೈಲಿಯನ್ನು ನೋಡುವುದೇ ಅಂದ. ‘ಢಂ’ ಶಬ್ದ ಕೇಳುವುದೇ ಚೆಂದ…! ಅಳಿವಿನ ಅಂಚಿನಲ್ಲಿರುವ ಜಾನಪದ ವಾದ್ಯ ರಕ್ಷಣೆಗೇ ಪಣತೊಟ್ಟಿರುವ ನನ್ನೂರ ಗ್ರಾಮಸ್ಥರ ಕಾರ್ಯ ನಿಜಕ್ಕೂ ಶ್ಲಾಘನೀಯ.
(ಲೇಖಕರ ‘ದಂಡಿದ್ದ ಶಿಬಿರ’ ಕೃತಿಯಿಂದ ಆಯ್ದ ಲೇಖನ)

